ಶೋಷಿತರ ಧ್ವನಿ ಪ್ರೊ.ಬಿ. ಕೃಷ್ಣಪ್ಪ (ಭಾಗ-1) Prof.B.Krishnappa
Dalita Sangharsha Samiti DSS
source VARTHABHARATHI daliy
ಶೋಷಿತರ ಧ್ವನಿ ಪ್ರೊ.ಬಿ. ಕೃಷ್ಣಪ್ಪ (ಭಾಗ-1)
ಬುಧವಾರ - ಜೂನ್ -09-2010 ಪ್ರಾಚೀನ ಕಾಲಘಟ್ಟದ ನಂತರದ ಹಂತಗಳ ಭಾರತೀಯ ಇತಿಹಾಸದಲ್ಲಿ ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಗುಲಾಮನನ್ನಾಗಿ ಕಾಣು ತ್ತಿದ್ದ; ಹಂದಿ ನಾಯಿಗಳಿಗಿಂತಲೂ ಕೀಳಾಗಿ ಕಂಡು ತುಳಿಯುವ ಶಕ್ತಿಗಳ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿತು. ಇಂತಹ ಕ್ರೂರ ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು.ಶೋಷಿತರ ಹಕ್ಕುಗಳಿ ಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ.
ಚಿತ್ರದುರ್ಗ ಜಿಲ್ಲೆಯ ಹರಿಹರದ ಬಸಪ್ಪ ಮತ್ತು ಚೌಡಮ್ಮನವರ ಹಿರಿಯ ಮಗನಾಗಿ ಪ್ರೊ.ಬಿ. ಕೃಷ್ಣಪ್ಪನವರು 1938, ಜೂನ್ 9 ರಂದು ಜನಿಸಿದರು.
ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿ ದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು.
ನಡುವೆ ಬಿಟ್ಟಿರುವ ವಿದ್ಯಾಭ್ಯಾಸವನ್ನು ಮತ್ತೆ ಮುಂದು ವರಿಸಿ ಚಿತ್ರದುರ್ಗದಲ್ಲಿ ಬಿ.ಎ.ಪದವಿ, ಮೈಸೂರಲ್ಲಿ ಎಂ.ಎ. ಪದವಿ ಪಡೆದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸರ್.ಎಂ.ವಿ. ಕಾಲೇಜಿನಲ್ಲಿ 1967ರಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದರು. ಬಳಿಕ ಅಲ್ಲಿಯೇ ಪ್ರೊಫೆಸರ್ ಮತ್ತು ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲೆಯ ಕಾಗೋಡು ಗ್ರಾಮದಲ್ಲಿ ಶಾಂತವೇರಿ ಗೋಪಾಲ ಗೌಡರ ನಾಯಕತ್ವದಲ್ಲಿ ‘‘ಉಳುವವನೆ ಭೂಮಿಗೆ ಒಡೆಯ’’ ಚಳವಳಿ ಮತ್ತು ಜಾತಿವಿನಾಶ ಚಳವಳಿ ಆರಂಭ ವಾಗಿದ್ದು, ಆ ಚಳುವಳಿಯಿಂದ ಪ್ರೊ.ಬಿ. ಕೃಷ್ಣಪ್ಪ ಪ್ರಭಾವಿತರಾದರು.
ಬುದ್ಧ, ಅಂಬೇ ಡ್ಕರ್, ಲೋಹಿಯಾ, ಮಾರ್ಕ್ಸ್ ಮತ್ತು ಪೆರಿಯಾರ್ ಮೊದಲಾದ ಈ ಮಹಾನ್ ವ್ಯಕ್ತಿಗಳ ಬಗ್ಗೆ ಅವರು ಅಧ್ಯಯನ ಮಾಡಿದರು. ಆದರೆ ಅವರು ಹೆಚ್ಚು ಪ್ರಭಾವಿತರಾದದ್ದು ಅಂಬೇಡ್ಕರ್ ವಿಚಾರಗಳಿಂದ. 1970ರ ದಶಕದಲ್ಲಿ ಡಾ. ಲೋಹಿಯಾರ ಸೋಷಿಯಲಿಸ್ಟ್ ಪಾರ್ಟಿ ಮತ್ತು ಆ ಪಕ್ಷದ ‘ಸಮಾಜವಾದಿ ಯುವಜನ ಸಭಾ’ ಸಂಘಟನೆಯಲ್ಲಿ ರಾಜ್ಯ ಮುಖಂಡರಾಗಿ ದುಡಿದರು.
ಆದರೆ ಸಮಾಜವಾದಿ ಚಳವಳಿಯಲ್ಲಿ ಮೇಲು ಜಾತಿಯವರೇ ನಾಯಕರಾಗಿದ್ದು, ಕೆಳಜಾತಿಗಳ ಮೇಲೆ ನಡೆಯುವ ದೌರ್ಜನ್ಯ ಮತ್ತು ಶೋಷ ಣೆಗಳನ್ನು ಖಂಡಿಸುವ ಕಾರ್ಯಕ್ರಮಗಳು ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಸಮಸ್ಯೆಗಳ ಕುರಿತು ಹೋರಾಟ ಗಳು ಇರಲಿಲ್ಲವಾದ್ದರಿಂದ ಸಮಾಜವಾದಿ ಚಳವಳಿಯ ಸಂಘಟನೆಯನ್ನು ತೊರೆದರು. ಅಂಬೇಡ್ಕರ್ವಾದದ ನೆಲೆಗಟ್ಟಿನಲ್ಲಿ 1974-75 ರಲ್ಲಿ ಜಾತಿರಹಿತ, ವರ್ಗರಹಿತ, ಲಿಂಗಭೇದ ರಹಿತ ಸಮಾಜ ರಚನೆಯ ಉದ್ದೇಶ ಹೊಂದಿದ ಸಂಘಟನೆಯನ್ನು ತಮ್ಮ ಒಡನಾಡಿ ಗಳೊಂದಿಗೆ ಸೇರಿ ಅಸ್ತಿತ್ವಕ್ಕೆ ತಂದರು.
ಮೊದಲ ಬಾರಿಗೆ ಆರಂಭಿಸಿದ ಕರ್ನಾಟಕ ದಲಿತ ಲೇಖಕರ ಮತ್ತು ಕಲಾವಿದರ ಸಂಘಟನೆ (ದಲೇಕಸಂ;)ಯ ಶೀರ್ಷಿಕೆಯನ್ನು ನಂತರದಲ್ಲಿ ಬದಲಾಯಿಸಿ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ (ದಸಂಸ;) ಎಂದು ಶೀರ್ಷಿಕೆಯಾಗಿ ರಾಜಕೀಯ ರಹಿತವಾದ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಎಂಬುದಾಗಿ ಆರಂಭ ವಾಯಿತು. ಮುಖ್ಯವಾಗಿ ‘ಅಸ್ಪಶ್ಯ ವರ್ಗಗಳು’ ಮತ್ತು ಸಹ ಶೋಷಿತ ಬಡವರೆಲ್ಲರೂ ‘ದಲಿತ’ ರೆಂದು ವಿಶಾಲ ಅರ್ಥ ಹೊಂದಿತು. ಈ ಹಿನ್ನೆಲೆ ಯಿಂದ ಶೋಷಿತರ ವಿಮೋಚನೆಯ ಆಂದೋ ಲನವು ಶೋಷಿತರಾದ ‘ಅಸ್ಪಶ’ ವರ್ಗಗಳ ನೇತೃತ್ವದಲ್ಲಿ ನಡೆಯಬೇಕೆಂದು ಸೂಚಿಸಿದರು.
ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿದ್ದ ಕೊಲೆ, ಸುಲಿಗೆ, ಹಲ್ಲೆ, ಅತ್ಯಾಚಾರಗಳ ವಿರುದ್ಧ ಅಸಂಖ್ಯಾತ ಪ್ರತಿಭಟನಾ ಚಳವಳಿಗಳ ನೇತೃತ್ವವನ್ನು ಅವರು ವಹಿಸಿದರು. ಸರಕಾರಿ ಭೂಮಿ ಆಕ್ರಮಣ, ಭೂ ಹೀನರಿಗೆ ಭೂ ಮಂಜೂರಾತಿ ಮುಂತಾದ ಹೋರಾಟಗಳು ನಡೆದವು.
ಹಿಂದುಳಿದ ವರ್ಗದ ‘ಶೇಷಗಿರಿ ಯಪ್ಪನ ಕಗ್ಗೊಲೆ’ ಮತ್ತು ಆತನ ಮಗಳು ಅನುಸೂಯ’ರ ಮೇಲೆ ಜರಗಿದ ಅತ್ಯಾಚಾರ ಖಂಡಿಸಿ ಕೋಲಾರದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ, ಪರಿಶಿಷ್ಟರ ಆಸ್ತಿ ಪರಭಾರೆ ನಿಷೇಧ ಕಾಯ್ದೆ (), ‘ಚಂದ್ರಗುತ್ತಿ ಬೆತ್ತಲೆ ಮೆರವಣಿಗೆ’ ನಿಷೇಧ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ಚೆನ್ನಪ್ಪ ರೆಡ್ಡಿ ಆಯೋಗ ಮತ್ತು ಮಂಡಲ್ ವರದಿ ಆಯೋಗ ಜಾರಿಗೊಳಿಸಲು ಚಳವಳಿ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಮೀಸ ಲಾತಿ ಮತ್ತು ಭಡ್ತಿ ಮೀಸಲಾತಿ ವಂಚನೆ ಪ್ರತಿ ಭಟಿಸಿ ಚಳವಳಿಗಳು ಹೀಗೆ ಅಸಂಖ್ಯಾತ ನಿರಂತರ ಹೋರಾಟಗಳನ್ನು ಜೀವನದುದ್ದಕ್ಕೂ ನಡೆಸಿದರು.
ವ್ಯವಸ್ಥೆಯ ಆಮೂಲಾಗ್ರ ಬದಲಾ ವಣೆಗಾಗಿ ಸ್ವತಂತ್ರ ರಾಜಕೀಯ ಅಧಿಕಾರವನ್ನು ಗಳಿಸಬೇಕೆಂದು ಅದಕ್ಕಾಗಿ ಅಂಬೇಡ್ಕರ್ ಸಿದ್ಧಾಂತದ ಆಧಾರ ಹೊಂದಿದ ಹೊಸ ಪಕ್ಷ ವೊಂದರ ಮೂಲಕ ಶೋಷಿತರ ಪರವಾದ ಸರಕಾರವನ್ನು ರಚಿಸುವ ಅಗತ್ಯತೆಯನ್ನು 1980ರಲ್ಲಿ ಪ್ರತಿಪಾದಿಸಿದರು. ಸ್ವತಃ ಹೊಸ ಪಕ್ಷವೊಂದನ್ನು ಹುಟ್ಟು ಹಾಕಲು ಹಲವು ಬಾರಿ ಅವರು ಪ್ರಯತ್ನಿಸಿದರು. ಆದರೆ ಸಮಾನ ಮನ ಸ್ಕರ ಸಹಕಾರವಿಲ್ಲದೆ ಅಸಹಕಾರದಿಂದಾಗಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಅವರ ಪ್ರಯತ್ನ ಸಫಲವಾಗಲಿಲ್ಲ.
ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.
ಕರ್ನಾಟಕ ದಲಿತ ಚಳವಳಿಯಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರು ಪ್ರೊ.ಬಿ.ಕೆ.ಯವರೆಂದೇ ಪರಿಚಿತರು. ಕಾರ್ಯಕರ್ತರೊಂದಿಗೆ ಬೆರೆತಾಗ, ತಾನೊಬ್ಬ ಪ್ರೊಫೆಸರ್ ಎಂಬ ಅಂತಸ್ತ (ಜಿಜ್ಞಜಿಠಿ )ನ್ನು ಎಂದೂ ತೋರ್ಪ ಡಿಸದ ಸರಳ ಸ್ವಭಾವದ ಆತ್ಮೀಯ ಹಿರಿಯರಾಗಿದ್ದರು. ಸಮಯ ಪ್ರಜ್ಞೆ ಯಿಲ್ಲದೆ ವರ್ತಿಸುವವರ ಮೇಲೆ ತುಸು ರೇಗುತ್ತಿದ್ದರೂ, ತಮ್ಮ ಪಾಲಿಗೆ ಅದೊಂದು ನೈತಿಕತೆಯ ಪಾಠವೆಂದೇ ಕಾರ್ಯ ಕರ್ತರು ತಿಳಿದಿದ್ದರು. ಕರ್ನಾಟಕ ದ.ಸಂ.ಸ. ಅದರ ಚಟುವಟಿಕೆಯ ಕುರಿತು ಮಾಧ್ಯಮದ ಮೂಲಕ ಪ್ರಚಾರ ಗೊಳ್ಳದೆ, ತನ್ನದೇ ಆದ ಶೈಲಿಯಿಂದ ಜನರ ಬಾಯಿದೆರೆ ಮೂಲಕ ಪ್ರಚಾರವಾಗುವ ಕಾಲವಾಗಿತ್ತು.
ಪ್ರೊ.ಬಿ.ಕೆ.ಯವರ ನಾಯಕತ್ವವು ದಲಿತ ಚಳವಳಿಗೆ ಸೈದ್ಧಾಂತಿಕವಾದ ಜೀವಾಳ ವಾಗಿತ್ತು. ಜರಗುವ ಯಾವುದೇ ದಲಿತ ಚಳವಳಿಯಲ್ಲಿ ಬಿ.ಕೆ. ಭಾಗವಹಿಸುತ್ತಾ ರೆಂದರೆ ದಲಿತರ ಅಂತಃಕರಣದಲ್ಲಿ ಮೂಡಿ ಬರುತ್ತಿತ್ತು ಮಹದ್ದಾನಂದ. ಅವರು ಮಂಡಿಸುತ್ತಿದ್ದ ಅವರ ದೀರ್ಘ ವಾದ ಮಾತನ್ನು ಉದಾಸೀನವಿಲ್ಲದೆ ನಿಶ್ಶಬ್ದದಿಂದ ದಲಿತರು ಆಲಿಸುತ್ತಿದ್ದರು. ಬಿ.ಕೆ. ಮಾತಿಗೆ ಅಷ್ಟು ಆಕರ್ಷಣೆಯಿತ್ತು ಮತ್ತು ಅವರ ಮಾತುಗಳು ದಲಿತರು ಅನುಭವಿಸುತ್ತಿದ್ದ ನೋವು ನಲಿವುಗಳಿಗೆ ಹತ್ತಿರ ವಿತ್ತು. ಅವರು ರಚಿಸಿರುವ ಸಾಹಿತ್ಯಗಳು ತೀರಾ ಕಡಿಮೆ.
ಬಹುತೇಕ ವಿಚಾರಗಳನ್ನು ಸಭೆ, ಸಮಾ ರಂಭ ಮತ್ತು ಶಿಬಿರಗಳಲ್ಲಿ ವೌಖಿಕವಾಗಿ ಪ್ರಚಾರ ಪಡಿಸುತ್ತ ಬಂದವರು. ಹಲವಾರು ವಿಷಯಗಳ ಮೇಲೆ ನಾವು ಮಾತನಾಡಿದ ಮಾತುಗಳನ್ನು ಸಂಗ್ರಹಿಸಿ ಅಚ್ಚು ಹಾಕುತ್ತಿದ್ದರೆ ಅನೇಕ ಸಂಪುಟಗಳನ್ನು ಹೊರತರಬಹುದಿ ತ್ತೆಂದು ಸ್ವತಃ ಬಿ.ಕೆ.ಯವರೆ ನುಡಿಯುತ್ತಿದ್ದರು. ರಾಜ್ಯದ ಮೂಲೆ ಮೂಲೆಗಳ ದಲಿತ ಕಾಲನಿ ಗಳಲ್ಲಿ ಸಮಿತಿಯ ಹಾಡುಗಳು ಪ್ರತಿದಿನ ಮೊಳಗುತ್ತಿತ್ತು.
ಸಂಘಟನೆಗೆ ಬಹುದೊಡ್ಡ ಮಾಧ್ಯಮವೆಂದರೆ ‘ದಲಿತ ಕಲಾ ಮಂಡಳಿ’ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನಸಂಘ ಟಿಸುವುದು ಈ ಮಾಧ್ಯಮದ ಕೆಲಸ. ಒಂದು ಅಂಗಕ್ಕೆ ನೋವಾದರೆ ಮತ್ತೊಂದು ಅಂಗಕ್ಕೂ ನೋವಾಗುತ್ತದೆಂಬ ಒಗ್ಗಟ್ಟಿನ ಬಾಂಧವ್ಯದ ಸರಪಣಿಯಂತೆ ಒಂದು ಹಳ್ಳಿಯಲ್ಲಿ ನಡೆದ ಒಂದು ಘಟನೆಗೆ ಸಮಗ್ರವಾಗಿ ದಲಿತರು ಸ್ಪಂದಿಸಿ ಪ್ರತಿಭಟಿಸುತ್ತಿದ್ದರು. ಸೀಟಿ (ಸಿಳ್ಳು;) ಹಾಕಿ ಸೂಚನೆ ಕೊಡುವಂತೆ ಸಮಿತಿಯು ಒಂದು ಕರೆ ನೀಡಿದರೆ ಸಾಕು, ಜೇನು ನೊಣದಂತೆ ಜನ ಒಗ್ಗಟ್ಟಾಗುತ್ತಿದ್ದರು.
-ಕೆ. ಪಿ. ಅಮೀನ್
cntnd...........
No comments:
Post a Comment